Saturday, August 6, 2011

ಕಿಚ್ಚು : ಭಾಗ ೧


ಕಿಚ್ಚು




ಟ್ರಿನ್ ಟ್ರಿನ್ !! ಟ್ರಿನ್ ಟ್ರಿನ್ !!!!


ಕೆಲಸದ ಹುಡುಗರು ಬಂದಿಲ್ಲ, ಡೆಲಿವರಿ ವ್ಯಾನ್ ಸೇರ್ವಿಸ್ ಗೆ ಕೊಟ್ಟಿದ್ದು ಇನ್ನು ಬಂದಿಲ್ಲಾ ಇವತ್ತು ಹೇಗೆ ಡೆಲಿವರಿ ಕಳಿಸಲಿ ಎಂಬಾ ಎಲ್ಲ ಹಲವು ಚಿಂತೆಯಿಂದಲೇ ರಿಸಿವರ್ ಕೈಗೆತ್ತಿಕೊಂಡೆ, ಆ ಬದಿಯಲ್ಲಿ "ಹಲೋ .... ಇದು ಅನ್ನಪೂರ್ಣ ಕ್ಯಾಟರರ್ಸಾ? "
ಅರ್ರೆ ಮುಂಬೈನಲ್ಲಿ ಕನ್ನಡದಲ್ಲಿ ಮಾತಡುತ್ತಿದ್ದರಲ್ಲಾ, ಎಂದು ಹೆಮ್ಮೆ ಇಂದಲೇ "ಹೌದು, ಹೇಳಿ ಯಾರು ಮಾತಾಡುವುದು..? ಏನಾಗಬೇಕಿತ್ತು ...? "
"ನಾನು, ವಸುಂದರ, ಮುಂಬೈ ನ ಜಿಲ್ಲಾಧಿಕಾರಿ."
"ಹೇಳಿ ಮೇಡಂ, ನೀವು ಕನ್ನಡದವರೆಂದು ಗೊತ್ತಿರಲಿಲ್ಲ, ನಿಮ್ಮ ಬಗ್ಗೆ ತುಂಬಾ ಅಭಿಮಾನವಿದೆ, ಇಷ್ಟು ದೊಡ್ಡ ಹುದ್ದೆಯಲ್ಲಿರುವವರು ಅದೆಷ್ಟೋ ಅಂಧರ, ನಿರ್ಗತಿಕರ ಪಾಲಿನ ಬೆಳಕಾಗಿ ಈಗಿನವರಿಗೆ ದಿಟ್ಟ ಮಾರ್ಗ ದರ್ಶನ ನೀಡುತ್ತಿದ್ದಿರಿ.. ನಿಮ್ಮ ಈ ಕಾರ್ಯ ನಿರಂತರವಾಗಿರಲಿ. ನನ್ನಿಂದ ಯಾವ ಸಹಾಯ ಬೇಕಿರುವುದು ಹೇಳಿ"
"ಜನಾರ್ಧನ್, ನಿಮ್ಮಿಂದ ನಾವು ಪರೋಕ್ಷವಾಗಿ ಕಳೆದ ೩ ವರುಷಗಳಿಂದ ಸಹಾಯ ಪಡೆಯುತ್ತಾ ಇದ್ದಿವಿ , ಅದು ನಿರಂತರವಾಗಿದ್ದರೆ ಸಾಕು, ನೀವು ಆಶ್ರಮ,ಅನಾಥಾಲಯ ಎಂಬ ಬೇಧ ತೋರದೆ ಅದೇ ಸ್ವಾದಿಷ್ಟ ಭೋಜನ ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದಿರಿ, ಅನಾಥಾಲಯದಲ್ಲಿ ಯಾರದ್ದೇ ಜನ್ಮದಿನವಿರಲಿ ಅಂದು ವಿಶೇಷ ಸಿಹಿ ತಿಂಡಿ, ವೃದ್ಧಾಶ್ರಮದಲ್ಲಿ ಯಾರದ್ದೋ  ಸಾವು ಸಂಭವಿಸಲಿ ಅವರ ಶ್ರಾದ್ಧದ ಖರ್ಚು ಎಲ್ಲಾ ನಿಮ್ಮ ಕೈಯಾರೆ ಹಾಕುತ್ತಿದ್ದಿರಿ , ಇನ್ನ್ಯಾವುದೇ ಸಹಾಯ ನಾವು ಕೇಳೆವು."
"ನನ್ನ ಮಕ್ಕಳಿಗೆ ಒಂದು ತುಂಡು ಬಟ್ಟೆ ಕೊಡುವ ಯೋಗ್ಯತೆ ಇರಲಿಲ್ಲ, ಮಗ ಬದುಕಿದ್ದಾಗಲೇ ತಂದೆ ತಾಯಿ ಬೀದಿ ಹೆಣವಾದರು, ಆ ಪ್ರಾಯಶ್ಚ್ಚಿತ್ತವಾಗಿ ಈ ಕಾರ್ಯಗಳನ್ನೂ ಮಾಡುತಿದ್ದೇನೆ, ನೀವು ಹೇಳಿ ಈಗ ಕರೆ ಮಾಡಿದ ಕಾರಣ "
"ಏನಿಲ್ಲಾ, ನಿಮಗೆ ಈ ತಿಂಗಳ ಬಿಲ್ ಪಾವತಿ ಮಾಡುವುದರ ಬಗ್ಗೆ, ನನ್ನ ಸೆಕ್ರಟರಿ ರಜೆಯಲ್ಲಿ ಇರುವುದರಿಂದ ಕಳಿಸಲಾಗಲಿಲ್ಲ, ನೀವು ಯಾರನ್ನಾದರೂ ನನ್ನಲ್ಲಿಗೆ ಕಳುಹಿಸಿ ಕೊಟ್ಟರೆ ಆ ಹಣ ಕೊಟ್ಟು ಕಳುಹಿಸುವೆ,"
"ಸರಿ ಮೇಡಂ, ನಾಳೆ ನನಗೆ ಆ ಕಡೆಗೆ ಬರಲಿಕ್ಕಿದೆ , ಆ ಸಮಯಕ್ಕೆ ನಿಮಗೆ ಬೇಟಿ ನೀಡುತ್ತೇನೆ, ಯಾವ ಸಮಯದಲ್ಲಿ ನೀವು ಲಭ್ಯರಿರುತ್ತಿರಿ ತಿಳಿಸಿದರೆ ಉತ್ತಮ."
"ನಾಳೆ, ಎರಡನೇ ಶನಿವಾರ ವಾದಕಾರಣ ಆಫೀಸ್ ಸಂಭಂದಿ ಯಾವುದೇ ಕೆಲಸವಿರುವುದಿಲ್ಲ ಯಾವ ವೇಳೆಗೂ ಬಂದರೂ ನಾನು ಲಭ್ಯ, ಬನ್ನಿ."
"ನಾಳೆ ಸಿಗುತ್ತೇನೆ."
ತನ್ನ ಜೀವನವನ್ನು ಇತರರಿಗೆ ಮೀಸಲಿಟ್ಟ ಆ ಮಹಾ ನಾಯಕಿಯೊಡನೆ ಮಾತನಾಡಿದ ನನ್ನಲ್ಲೂ ಯಾವುದೊ ಸಾರ್ಥಕತೆ ಮೂಡಿದಂತಾಯಿತು.ಇಲ್ಲಿ ವರೆಗೆ ಅವರ ಕಾರ್ಯದಲ್ಲಿ ಪರೋಕ್ಷವಾಗಿ ಸಹಾಯ ಮಾಡುತಿದ್ದೆ, ಆದರೆ ಇಲ್ಲಿವರೆಗೆ ಭೇಟಿ ಆಗಿರಲಿಲ್ಲ. ಯಾವುದೇ ಭ್ರಷ್ಟತೆಗೆ ಒಳಗಾಗದೆ ಉಳಿದ ಕೆಲವೇ ಕೆಲವು ಸರ್ಕಾರಿ ನೌಕರರಲ್ಲಿ  ಇವರು ಒಬ್ಬರಾಗಿದ್ದರು.ಅವರ ಭೇಟಿಗೆ ಉತ್ಸುಕ ನಾಗಿದ್ದೆ.



ನನ್ನ ಕೆಲಸ ಮುಗಿಸಿ ೧೧ ಗಂಟೆಯ ಸರಿಯಾಗಿ ಬಾಂಧ್ರದಲ್ಲಿನ ಕಲೆಕ್ಟರ್ ಆಫೀಸ್ ಗೇಟ್ ತಲುಪಿದೆ, ವಿಚಿತ್ರ ವೆನಿಸಿತು ಆ ಸರ್ಕಾರಿ ಕಛೇರಿ,ಮಾಮೂಲಿ ಸರ್ಕಾರಿ ಕಛೇರಿಯೇ ಆದರೆ ಇದು ಕೊಂಚ ಬಿನ್ನ ವಾಗಿತ್ತು, ಇಲ್ಲಿ ಇವರ ಕಾವಲಿಗೆ ಸರ್ಕಾರ ನಿಯೋಜಿಸಿದ ಕಾವಲುಗಾರರೊಂದಿಗೆ ಇವರೊಂದಿಗೆ ಸದಾ ಇರುವ ಇವರ ಅಭಿಮಾನಿಗಳ ಗುಂಪೂ ಇತ್ತು. ಈ ಗುಂಪು ಇವರ ಸರ್ಕಾರೇತರ ಕೆಲಸ ಕಾರ್ಯದಲ್ಲಿ ನೆರವಾಗುತಿತ್ತು,ಬೀದಿ ಚಿತ್ರ ಕಲಾವಿದರಿಗಾಗಿ ಇವರು ತಂದ ಹೊಸಯೋಜನೆ ಇಂದ ಇವರ ಮತ್ತು ಪಕ್ಕದಲ್ಲಿನ ಇತರ ಸರ್ಕಾರಿ ಕಛೇರಿಗಳ  ಆವರಣ ಗೋಡೆ ಶೋಭಿಸುತ್ತಿದ್ದವು .ಸರ್ಕಾರಿ ಲಾಂಚನ ಹೊತ್ತ ಇನೋವೋದ ಪಕ್ಕದಲ್ಲೇ ಒಂದು ೧೯೭೦ ರ ಮಾಡೆಲ್ ನ ಒಂದು ಫಿಯೆಟ್ ಕಾರು. ಇದನ್ನು ಅವರು ತಮ್ಮ ಖಾಸಗಿ ಕಾರ್ಯಗಳಿಗೆ ಬಳಸುತ್ತಿದ್ದರು. ಹಳೆಯ ಕಾರಾಗಿದ್ದರು ಅದು ಆಗತಾನೆ ಬಿರಿದಂತಹ ಮೊಗ್ಗಿನಂತೆ ಹೊಳೆಯುತ್ತಿತ್ತು, ಇದನ್ನು ಇನ್ನು ಹೊಳೆಯುವಂತೆ ಮಾಡುವ ಕಾರ್ಯದಲ್ಲಿ ೬೦ ವಸಂತ ದಾಟಿದ ಒಬ್ಬ ವ್ಯಕ್ತಿ ತೊಡಗಿದ್ದ. ಅದನ್ನೇ ನೋಡುತ್ತಾ ನಿಂತ ನನ್ನಲ್ಲಿ ಅವ ,
 "ಏನು ..?ಇದು ಮಾರಲಿಟ್ಟ ಕಾರ್ ಅಲ್ಲ, ಮೇಡಂ ಗೆ ಈ ಕಾರ್ ಅಂದರೆ ತುಂಬಾ ಇಷ್ಟ, ಅದಕ್ಕಾಗಿಯೇ ಈ ಸಿಂಗಾರಿಕೆ "ಅಂದ
ನಾನು "ಇದರಲ್ಲಿ ಅಂಥಹ ಸೆಳೆತ ಏನು ಅವರಿಗೆ ...?"
"ತನ್ನ ತಂದೆಯವರ ಕಾರ್ ಅಂತ ಹೇಳುತಿದ್ದರು, ತಂದೆಯವರ ನೆನಪಿಗಾಗಿಯೇ ಅದನ್ನು ಅವರು ೧೫ ವರುಷ ಹಿಂದೆ ಹುಡುಕಿ ಕೊಂಡುಕೊಂಡದ್ದು."
ಬೇರೆಯವರನ್ನು ತನಗಿಂತ ಹೆಚ್ಚಾಗಿ ಪ್ರೀತಿಸುವ ಇವರು ತನ್ನ ಜನ್ಮದಾತನಿಗೆ ಈ ಪರಿಯಾಗಿ ಪ್ರೀತಿಸುವುದು ನನಗೆ ಅಚ್ಚರಿ ಹುಟ್ಟಿಸಲಿಲ್ಲ, ಅವನಲ್ಲಿ "ಮೇಡಂ ಇದ್ದಾರ..?"
"ಇದ್ದಾರೆ ಯಾವುದೊ ಆಶ್ರಮದ ಲೆಕ್ಕ ಪತ್ರ ನೋಡುತ್ತಿದರು"
"ಸರಿ ಅವರಲ್ಲಿ ಮಾತನಾಡುವುದಿದೆ, ನೀವು ನಿಮ್ಮ ಕಾರ್ಯ ಮುಂದುವರಿಸಿ ... "ಅನ್ನುತ್ತ ಅಲ್ಲಿಂದ ಕಛೇರಿಯ ಮುಖ್ಯ ದ್ವಾರದ ಕಡೆಗೆ ನಡೆದೆ.


ಎಲ್ಲ ಕಡೆಯ ಸರ್ಕಾರಿ ಕಛೇರಿಯಲ್ಲಿರುವಂತೆ ಅದೇ ಸ್ಪ್ರಿಂಗ್ ಇರುವ ಬಾಗಿಲು ನನ್ನ ಮತ್ತು ಆ ಮಹಾನ್ ನಾಯಕಿ ವಸುಂದರರ ನಡುವೆ, ಹೊರಗಿನಿಂದಲೇ ಒಳ ಕೋಣೆ ನೋಡಿದೆ, ಅಚ್ಚುಕಟ್ಟಾಗಿ ಜೋಡಿಸಿಟ್ಟ ಭಾರತಿಯ ಸಂವಿಧಾನದ ಕುರಿತಾದ ಸಾಲು ಸಾಲು ಪುಸ್ತಕಗಳು ಮೊದಲ ಎರಡು ಕಪಾಟಿನಲ್ಲಿ, ಪಕ್ಕದಲ್ಲಿನ ಒಂದು ಸಣ್ಣ ಮರದ ಕಾಪಾಟಿನಲ್ಲಿ ಮೊದಲ ಸಾಲಿನಲ್ಲಿ ಹಿಂದಿಯ ಮಹಾನ್ ಲೇಖಕರ ಗ್ರಂಥಗಳು,ಎರಡನೇಯ ಸಾಲಿನಲ್ಲಿ ಕನ್ನಡದ ಕಾದಂಬರಿಗಳ ಸಾಲು ಸಾಲು, ಮೂರನೇ ಪಟ್ಟಿಯಲ್ಲಿ ವೇಧ ಗ್ರಂಥಗಳು, ಇಲ್ಲಿ ರಾರಾಜಿಸುತ್ತಿರುವ ಕುವೆಂಪು ರವರ "ಶ್ರೀ ರಾಮಾಯಣ ದರ್ಶನಂ",  ಬೇರೆ ಎಲ್ಲಾ ಕಪಾಟಿನಲ್ಲಿರುವಂತೆ ಈ ಕಪಾಟಿನಲ್ಲಿ ಸರ್ಕಾರಿ ನೋಂದಣಿ ಸಂಕೆ ಇರದ ಕಾರಣ ಇವ್ವು ಇವರ ಸ್ವಂತ ಸಂಗ್ರಹ ಎಂದು ತಿಳಿದುಕೊಂಡೆ. ಅದಕ್ಕೆ ಪಕ್ಕದಲ್ಲಿನ ಕಿಟಕಿಗೆ ಮುಖ ಮಾಡಿ ಮೊಬೈಲ್ ನಲ್ಲಿ ಮಾತಾಡುವ ಆ ಮಹಾನ್ ನಾಯಕಿ.

ಬಲಗೈಯಿಂದ ಆ ಬಾಗಿಲನ್ನು ಮುಂದೆ ಮಾಡಿದೆ, ನನ್ನ ಬಲ ಹೆಜ್ಜೆಯೂ ಒಳ ಇಟ್ಟೆ, ನನ್ನ ಹೆಜ್ಜೆಯ ಸಪ್ಪಳಕ್ಕೆ ಆ ನಾಯಕಿ ಹಿಂತಿರುಗಿನೋಡಿದಳು.ಎರಡನೇ ಹೆಜ್ಜೆ ಮೇಲೆ ಎತ್ತಿದನ್ನು ಅಲ್ಲೇ ನೆಲದಲ್ಲಿ ಊರಿದೆ, ಎಡಗೈ ಇನ್ನು ಎಡಬದಿಯ ಬಾಗಿಲಿನ ಮೇಲಿತ್ತು, ಅದರಲ್ಲಿನ ಸ್ಪ್ರಿಂಗ್ ಅದ ಹಿಂದೆ ಎಳೆಯುತ್ತಿತ್ತು, ಒಮ್ಮೆಲೇ ಕೈ ಬಿಡಲು ಬಾಗಿಲು ಒಮ್ಮೆಲೇ ಹಿಂದಕ್ಕೆ ಸರಿಯಿತು, ಬಾಗಿಲು ಹಿಂದೆ ಸರಿಯುತಿದ್ದಂತೆ ನನ್ನನ್ನೂ, ಆಕೆಯನ್ನೂ ಅದು ೨೫ ವರುಷ ಹಿಂದೆ  ಎಳಕೊಂಡು ಹೋಯಿತು.

ಕಿಚ್ಚು ಭಾಗ - ೨

No comments:

Post a Comment