Tuesday, February 28, 2012

ಡೈರಿ :ಪುಟಗಳನ್ನು ತೆರೆಯುವ ಮುನ್ನ...



ಪುಟಗಳನ್ನು ತೆರೆಯುವ ಮುನ್ನ
ಕಾಲೇಜ್ ಮುಗಿಸಿ ಮನೆಗೆ ಹೋಗುವ ಅವಸರದಲ್ಲಿದ್ದೆ ನಾನು ಬಸ್ ಬೇರೆ ಇರಲಿಲ್ಲ ಮಾಮೂಲಿನಂತೆ ಅಂದೂ ಯಾವುದೊ ಬಂದ್ ಇತ್ತು. ಮಳೆಯೂ ಜೋರಾಗಿ ಬರುತಿತ್ತು.ಆಗಲೇ ನನ್ನ ಕೈಯಲ್ಲಿರುವ ಕೈಗಡಿಯಾರ 4 ಗಂಟೆ ಅಂತ ತೋರಿಸುತಲಿತ್ತು , 4:40 ಕ್ಕೆ ಆ ಟ್ರೈನ್ ಇದ್ದಿದ್ದು. ಮಾಮೂಲಿನ ದಿನದಲ್ಲಿ ತುಂಬಿ ಹೋಗುತ್ತಿರುವ ಕಣ್ಣೂರ್ ಪಸ್ಸೇನ್ಜೆರ್ ಕಥೆ ಇವತ್ತು ಯಾವ ರೀತಿಯಾಗಿರಬಹುದೋ, ಉಳಿದ ದಿನದಲ್ಲಿ ಆರಾಮಾಗಿ ಸಿಕ್ಕುತ್ತಿದ್ದ ಟಿಕೆಟ್ ಇವತ್ತು ಕಷ್ಟ ಪಟ್ಟು ಸಂಪಾದಿಸಬೇಕಿತ್ತು. ಬಂದ್ ಗೆ ಕೇರಳದಲ್ಲಿ ಅದರಲ್ಲೂ ಕಾಸರಗೋಡ್ ಜಿಲ್ಲೆಯಲ್ಲಿ ಸಿಗುವಷ್ಟು ಬೆಂಬಲ ಬೇರ್ಯಾವುದೇ ಭಾಗದಲ್ಲಿ ಸಿಗಲಿಕಿಲ್ಲ. ಕೇರಳದ ಕಮ್ಯುನಿಸಂ ಭಾವನೆಗಳಿಗೆ ಮನಸಲ್ಲೇ ಶಪಿಸುತ್ತಾ ಎದುರು ಬಂದ ರಿಕ್ಷಾದವನಲ್ಲಿ   ರೈಲ್ವೆ ಸ್ಟೇಷನ್ ಕಡೆಗೆ ಹೋಗಪ್ಪಾ ಅಂದೆ.
ಅವನು ನವಭಾರತ್ ಸರ್ಕಲ್ ಗೆ ಒಂದು ರೌಂಡು ಹೊಡೆಸಿ ಬದಿಯಲ್ಲಿನ  ಮಳೆ ಪರದೆಯನ್ನು ಕಟ್ಟಿದ. ನಾನು ಒಂದು ಬದಿಯಲ್ಲಿ ನನ್ನ ಒದ್ದೆ ಕೊಡೆಯನ್ನು ಇಟ್ಟು ಬದಿಯಲ್ಲಿ ಎರಡು ಪುಸ್ತಕಗಳನ್ನು ಹೊರಲು ಬಳಸುತಿದ್ದ ಬ್ಯಾಗನ್ನು ಇಟ್ಟೆ. ಹೊರಗಿನಿಂದ ಮಳೆ ಹನಿಗಳು ಜಿನುಗುತ್ತಾ ಮೈಮೇಲೆ ಮುತ್ತಿನ ತೋರಣ ಕಟ್ಟಿರುವ ಮರೂನ್ ಬಣ್ಣದ ಡೈರಿಯೊಂದು ಕಣ್ಣಿಗೆ ಸೀಟಿನ ಬದಿಯಲ್ಲಿ ಒಂಟಿಯಾಗಿ ಬಿದ್ದಿತ್ತು.

ನಾನು ರಿಕ್ಷಾದವನಲ್ಲಿ "ಅಣ್ಣಾ ಈ ಡೈರಿ ಮಳೆಯಲ್ಲಿ ನೆನೆದು ಚೆಂಡಿಯಾಗಿದೆ. ತೆಗೆದಿಡಿ"ಅಂದೆ.
ಕೆ.ಎಸ್ ರಾವ್ ರೋಡ್ ನಲ್ಲಿ ನಡೆಯುತಿದ್ದ ಕೊಂಕ್ರೆಟ್ ಕೆಲಸ ಮಳೆ ಬಂದು ತೊಯ್ದು ಹರಿಯುತ್ತಾ ಇತ್ತು. ಒಂದು ಬದಿಯಲ್ಲಿ ವಾಹನಗಳಿಗೆ ಹೋಗಲು ಬಿಟ್ಟ ಸಿಟಿ ಪೋಲಿಸ್ ನವರು ಇನ್ನೊಂದು ಬದಿಯಲ್ಲಿ ತೋಡಿರುವ ಚಡಿಯಲ್ಲಿ  ಶೆಕರಣೆ ಗೊಂಡ ಮಳೆನೀರನ್ನು ಹೊರಕ್ಕೆ ಪಂಪ್ ಮಾಡುತಿದ್ದರು. ನನ್ನ ಮಾತಿಗೆ ಒಮ್ಮೆ ತಿರುಗಿ "ಯಾವ್ ಡೈರಿ..?" ಅಂದ.
"ಯಾರೋ ಬಿಟ್ಟು ಹೋಗಿರಬಹುದು" ಅಂದೆ ನಾನು.
ಅದಕ್ಕೆ ಪ್ರತಿಯಾಗಿ ಅವ "ಹಾಂ ನೀವು ಹತ್ತೋಕೆ ಮುಂಚೆ ಒಬ್ಬಳು ಹುಡುಗಿ ಈ ರಿಕ್ಷಾದಲ್ಲಿ ಬಂದಿದ್ದಳು, ಕಂಕನಾಡಿಯಿಂದ...ಅವಸರದಲ್ಲಿದ್ದಳು; ಅವಳದ್ದೇ ಆಗಿರಬಹುದು"ಅಂದ.
ನಾನು "ಆ ಹುಡುಗಿ ಹೇಗಿದ್ದಳು ...?"ಎಂದು ಕುತೂಹಲದಿಂದಲೇ ಕೇಳಿದೆ.

ಅದಕ್ಕೆ ಅವ "ಅರ್ರೆ .. ಹುಡುಗಿ ಅಂದರೆ ಜೊಲ್ಲು ಸುರಿಸುತ್ತಿರಿ ... ಆದರೆ ತುಂಬಾ ಅವಸರ ದಲ್ಲಿದಂತೆ ಕಾಣುತಿದ್ದಳು..ಇಪ್ಪತ್ತು ನಿಮಿಷದ ದಾರಿಯಲ್ಲಿ ನನ್ನಲ್ಲಿ 30 ಬಾರಿ ಕೇಳಿದ್ದಳು ಇನ್ನು ಎಷ್ಟು ಹೊತ್ತು ಹಿಡಿಯುತ್ತೆ ಬಿಜೈ ಬರಲು ಅಂತ... ನಂತರ ಬಿಜೈ ಬಂದೊಡನೆ ಅವಸವಸರವಾಗಿಯೇ ಇಳಿದಿದ್ದಳು...ಸುಮಾರು 2 ಗಂಟೆಯ ಹೊತ್ತಿರಬಹುದು, ನಾನು ಅವಳನ್ನು ಅಲ್ಲಿ ಬಿಟ್ಟು, ಮನೆಯಲ್ಲಿ ಊಟ ಮುಗಿಸಿ ಪುನಃ ನನ್ನ ಸ್ಟ್ಯಾಂಡ್  ಆದ ಕಂಕನಾಡಿಗೆ ಬರುತ್ತಿರಬೇಕಾದರೆ ನಾನು  ಅವಳನ್ನು ಎಲ್ಲಿ ಬಿಟ್ಟಿದ್ದೇನೋ ಅದೇ ಬಸ್ ಸ್ಟಾಪ್ನಲ್ಲಿ ಯಾರಿಗೋ ಕಾದು ಸುಸ್ತಾಗಿ ಕುಳಿತಿದ್ದಳು. ನಾನು ಅವಳನ್ನು ನೋಡುತಿದ್ದಂತೆ ಅವಳ ಕಣ್ಣಲ್ಲಿನ ಮುತ್ತಿನ ಹನಿ ಹಾಗಯೇ ಜಾರಿ ಮಳೆನೀರಿನಲ್ಲಿ ಕರಗಿತು, ಒಂದು ಕ್ಷಣಕ್ಕೆ ನನಗೆ ನಾನೆಕೋ ಇವಳಿಗೆ ಇಷ್ಟು ಹತ್ತಿರವಾದೆ ...? ಎಂದನಿಸಿತು. ನಾನು ರಿಕ್ಷಾ ಬದಿಗೆ ಸರಿಸಿ ನಿಲ್ಲಿಸಿ, ಅವಳು ಕೂತಲ್ಲಿಗೆ ಹೋದೆ.
"ಅಮ್ಮ ಏನಾಯ್ತಮ್ಮ ..? "ಎಂದು ಕೇಳಲು ನನ್ನಲ್ಲಿ ನನಗೆ ಗೊತ್ತಾಗದ ಹಾಗೆ ತಂದೆ ಮಗಳ ಮಮತೆ ಮೂಡಿದನ್ನು ಅವಳು ಗಮನಿಸಿದಳು.
"ಅಣ್ಣಾ ತುಂಬಾ ಬೇಜಾರಾಗುತಿದೆ ಅಣ್ಣಾ, ಯಾರನ್ನು ಪಡಕೊಳ್ಳಬೇಕು ಎಂದು ಬಂದಿದ್ದೇನೋ ಅವರು ಕೊನೆಗೂ ಸಿಗಲೇ ಇಲ್ಲ, ಇನ್ನು ನನಗೆ ಅವರು ಸಿಗುವುದೂ ಇಲ್ಲ... "ಅಂದು ಕಣ್ಣಿರಿಟ್ಟಳು.
ಬಳಿಕ ಅವಳು ನನ್ನ ರಿಕ್ಷಾದಲ್ಲಿ ಬಂದು ಕುಳಿತು ಕೊಂಡಳು, ಅವಳು ಮುಂದಿನ ಶಿಕ್ಷಣಕ್ಕೆ ಎರ್ನಾಕುಳಂ ಹೋಗುತಿದ್ದಳಂತೆ, ಟ್ರೈನ್  ಅವಳನ್ನೇ ಕಾಯುತ್ತಿತ್ತು ಎಂಬಂತಿತ್ತು , ಅವಳು ರಿಕ್ಷಾದಿಂದ ಇಳಿಯುತಿದ್ದಂತೆ ಅವಳನ್ನು ಹೊತ್ತು ಟ್ರೈನ್  ತನ್ನ ದಾರಿ ಹಿಡಿಯಿತು.ಹೋಗ ಬೇಕಾದರೆ ನನಗೆ ಒಂದು ಸರ್ತಿ ಕೈ ಬೀಸುತ್ತಾ , ಇನ್ನ್ಯಾವಗಲಾದರು ಸಿಗೋಣ ಅಂದಿದ್ದಳು.

ಇಷ್ಟು ವಿಚಾರ ಬಿಟ್ಟರೆ ಅವಳ ಬಗ್ಗೆ ಬೇರೇನೂ ಗೊತ್ತಿಲ್ಲಾ, ಆದರೆ ಬರೇ ಒಂದೇ ಬೇಟಿಗೆ ಮನುಷ್ಯರ ಸಂಭಂದ ಎಷ್ಟು ಗಟ್ಟಿಯಾಗ ಬಹುದು ಎಂಬುದನ್ನು ನನ್ನ ೫೪ ವರುಷದ ಜೀವನದಲ್ಲಿ ಇವತ್ತು ಮನವರಿಕೆ ಮಾಡಿ ಹೋಗಿದ್ದಳು ಆ ಹುಡುಗಿ "ಅಂದರು.

ಇದನ್ನು ಕೇಳುತ್ತಲೇ ಆ ಹುಡುಗಿಯ ಬಗ್ಗೆ ಮನದಲ್ಲೇ ಅಭಿಮಾನ ಮೂಡಲಾರಂಬಿಸಿತು. ನಾನು ಒಬ್ಬ ಹುಡುಗಿಯನ್ನು ಪ್ರಿತಿಸುತಿದ್ದೇನೆ ಎಂಬುದನ್ನು ಮರೆತು, ನೋಡಿರದ, ಕೇಳಿರದ ಆ ಹುಡುಗಿಯ ಬಗ್ಗೆ ಅದ್ಯಾಕೋ ಪ್ರೀತಿಯ ಅಲೆ ಉಕ್ಕಿದಂತಾಯಿತು.ಇನ್ನೂ ಅವಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ. ಆ ಡೈರಿ ಅವಳದಲ್ಲದಿದ್ದರೂ ಇರಬಹುದು ಎಂದು ಕೈಗೆತ್ತಿ ಕೊಂಡೆ.
ಬೇರೆಯವರ ವಯಕ್ತಿಕ ಡೈರಿ ಓದಬಾರದು ಎಂದು ನನ್ನ ಒಳಮನಸ್ಸು ಅಂದರೂ, ಅವಳ ಬಗೆಗಿನ ಕುತೂಹಲ ನನ್ನನ್ನು ಪುಟ ತಿರುಗಿಸುವಂತೆ ಮಾಡಿತು.

ಡೈರಿ : ಗತದ  ಪುಟಗಳು ಪ್ರಸ್ತುತದಲ್ಲಿ ಪ್ರಕಟವಾದಾಗ ಭವಿಷ್ಯದ ಭವಿಷ್ಯ ಒಂದು ರಹಸ್ಯ.
ಕಾಮತ್ ಕುಂಬ್ಳೆ 


ಡೈರಿ : ಪುಟ ೧

No comments:

Post a Comment