Tuesday, April 10, 2012

ಸಮಾಧಿ


ಮನಸಲ್ಲಿ ಸಾಲುಗಳು ಮತ್ತೆ ಮೂಡಿದವು 
ಅವನಿಗೆ ಮತ್ತೆ ಬರೆಯುವ ಮನಸ್ಸಾಯಿತು 
ಮನದ ಶಬ್ದಗಳು ಲೇಖನಿಯಿಂದ ಕೆಳಜಾರದೆ
ಬಿಳಿಯ ಹಾಳೆ ಖಾಲಿಯಾಗೇ  ಉಳಿಯಿತು.

ಮನಸಲ್ಲಿ ಭಾವದ ಲಹರಿ ಸರಾಗವಾಗಿ ಹರಿಯುತಿರೆ 
ಯಾಕಾಗಿ ಸಾಲುಗಳು ಅಲ್ಲೇ ಉಳಿಯಿತು..?
ಅವನು ತನ್ನಲ್ಲೇ ತಾನು ಕೇಳಿದ.
ಹೊರಬಾರದಿರಲು ಕಾರಣ ಎರಡೇ 
ಮೊದಲನೆಯದು ಭಾವ ಹೊರಹಾಕಿದಾಗ ಬರುವ ಟೀಕೆಗಳ ಹೆದರಿಕೆ ತನಗೆ 
ಎರಡನೆಯದು ಗೀಚಿ ಗೀಚಿ ತಳ ಸೇರಿದ ಶಾಯಿಯ ಕೊರತೆ ಹಿಡಿದ ಲೇಖನಿಗೆ

ಎರಡೂ ಕಾರಣಗಳನ್ನು ವಿಶ್ಲೇಷಿಸಿದ ಏಕಾಂತದಲಿ ಮತ್ತೆ 
ಧೈರ್ಯದಲಿ ಬೀಗುತ್ತಿರಲು ಮನಸ್ಸು ಇವನಿಗ್ಯಾಕೆ ಲೋಕದ ಹೆದರಿಕೆ ಈಗ  
ತುಂಬಿ ತುಳುಕುತ್ತಿದೆ ಶಾಯಿ ಹಲವು ದಿನದಿಂದ ಮೌನವಾಗಿರುವ ಲೇಖನಿಯಲಿ 

ಹಾಗಿದ್ದರೆ ಹೊರಟ ಲೇಖನಿ ನಡುವಲ್ಲೇ ನಿಂತದ್ದು ಏಕೆ..?
ಮನದ ಭಾವ ಪುಟದಲ್ಲಿ ಓಕುಳಿ ಉಣಿಸದೆ ಒಂದೇ ಪೂರ್ಣ ವಿರಾಮಕ್ಕೆ ಸುಸ್ತಾದ್ದೇಕೆ ..?

ಮನದಲಿ ಮೂಡಿದ ನೂರು ಭಾವನೆಗಳನು
ಈಗ ಎದ್ದ ಹಲವು ಪ್ರಶ್ನೆಗಳು ತೊಳೆಸಿದವು.
ಮೊದಲಿಗೆ ತಾನಾಗೆ ನಿಂತ ಲೇಖನಿಗೆ ಈಗ ಅವನ ಮನಸ್ಸು ಜೊತೆಯಾಯಿತು
ಸುತ್ತಲೂ ಜನರಿದ್ದರೂ ಅವನಿಗೆ ಯಾರದ್ದೋ ದನಿ ಕೇಳಿಸಿತು

ಹೌದು ಅದೇ ದನಿ ...ಮೌನದನಿ
ಕೈಯಲ್ಲಿದ್ದ ಲೇಖನಿಯ ಮೌನದನಿ
ಅದು ಅವನಿಗೊಬ್ಬನಿಗೆ ಕೇಳುವಂತೆ ಹೇಳುತಿತ್ತು 
"ಮನದ ಭಾವನೆ ಮನಸಲ್ಲಿದ್ದರೆ ಚಂದ 
ಮೌನದ ಮಾತಿಗೆ ನೂರು ಅರ್ಥ ಕಟ್ಟುವ ಸಾಮರ್ಥ್ಯ ಓದುವ ಜನಕ್ಕಿದೆ, 
ಅದನ್ನು ಬರೆದು ಅದಕ್ಕೆ ಹೊಸ ಅರ್ಥ ಕೆತ್ತಿಸುವ ಹುಚ್ಚು ಪ್ರಯತ್ನ ನಿನಗೆ ಏತಕೆ ..?"

ಅವನಿಗೂ ಅದು ಸರಿ ಎನಿಸಿತು.
ಮುಚ್ಚಳ ಮುಚ್ಚಿ ಲೇಖನಿಯನು ಬದಿಗೆಸೆದ. ಬರೆಯಲು ಹೊರಟ ಹಾಳೆ ಹರಿದ. ಪುಸ್ತಕವನ್ನು ಮುಚ್ಚಿ ಬೀರಿ ನೋಳಗಿಟ್ಟ
ಮತ್ತೆ ಕವಿತೆ ಹುಟ್ಟಲಿಲ್ಲ, ಭಾವಗಳು ಹೊರಚಿಮ್ಮಲಿಲ್ಲ.
ಮೌನದಲ್ಲೇ ಎಲ್ಲವೂ ಮರೆಯಾದವು.
ಹೊರಗಿನ ಪ್ರಪಂಚ ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತದೆ ಅಂದುಕೊಳ್ಳುತ್ತಾ 
ತನ್ನನ್ನು ತಾನು ಸರಿಯಾಗಿ ಅರ್ಥೈಸದೇ  ಮೌನದಲ್ಲೇ ಮರೆಯಾದ.
ಭಾವಗಳ ಹೊರಹಾಕದೇ ತನ್ನ ಅಸ್ತಿತ್ವವನ್ನು ತಾನೇ ಮರೆಮಾಚಿದ.

ಕಾಮತ್ ಕುಂಬ್ಳೆ 

2 comments:

  1. ಮೌನ ದನಿಗೆ ಭಾಷ್ಯ ಬರೆದದ್ದು ಚೆನ್ನಾಗಿದೆ. ಮೌನ ಭಾವಕ್ಕೆ ತೆರೆದುಕೊಂಡು ಮಾತಾಡಿದೆ. ಕೊನೆ ಚರಣಗಳು ಕಥೆ ಓದಿದಂತೆ ಭಾಸವಾಗುತ್ತವೆ.

    ReplyDelete
  2. Kumble avare enu ittichige nivu enannu barithale illvalla......

    ReplyDelete